Saturday, November 11, 2023

ಡಾ. ಪುಟ್ಟರಾಜ ಗವಾಯಿಗಳ ಜೀವನ ಚರಿತ್ರೆ

 

ಪುಟ್ಟರಾಜ ಗವಾಯಿಗಳ ಜೀವನ ಚರಿತ್ರೆ

ಪುಟ್ಟರಾಜ ಗವಾಯಿಗಳು ಅವಿಭಜಿತ ಧಾರವಾಡ ಜಿಲ್ಲೆಯ (ಈಗ ಹಾವೇರಿ ಜಿಲ್ಲೆಯ) ಹಾವೇರಿ ತಾಲ್ಲೂಕಿನ ದೇವಗಿರಿಯಲ್ಲಿ ಬಡ ಕನ್ನಡ ಲಿಂಗಾಯತ ಕುಟುಂಬದಲ್ಲಿ ಮಾರ್ಚ್ 3,1911 ರಲ್ಲಿ ಜನಿಸಿದರು.ಅವರ ಪೋಷಕರು ರೇವಯ್ಯ ವೆಂಕಟಪುರಮಠ ಮತ್ತು ಸಿದ್ದಮ್ಮ.ಅವರು 6 ನೇ ವಯಸ್ಸಿನಲ್ಲಿ ದೃಷ್ಟಿ ಕಳೆದುಕೊಂಡರು.ಅವರು 10 ತಿಂಗಳ ಮಗುವಾಗಿದ್ದಾಗ ತನ್ನ ಹೆತ್ತವರನ್ನು ಕಳೆದುಕೊಂಡರು,ನಂತರ ಅವರ ತಾಯಿಯ ಚಿಕ್ಕಪ್ಪ ಚಂದ್ರಶೇಖರಯ್ಯ ಅವರ ಆಶ್ರಯದಲ್ಲಿ ಬೆಳೆದರು.



ಕೇವಲ ೮ ವರ್ಷದ ಬಾಲಕರಾಗಿದ್ದಾಗ ಸಂಗೀತ ಕಲಿಕೆಯ ವಿದ್ಯಾರ್ಥಿಯಾಗಿ ಆಶ್ರಮದ ಮಡಿಲಿಗೆ ಬಿದ್ದ ಪುಟ್ಟರಾಜ ಗವಾಯಿಗಳು ಗುರುಗಳ ಆಶೀರ್ವಾದ, ನಿಷ್ಠೆ-ವಿಶ್ವಾಸ, ಸ್ವತ್ಛಂದ ಮನಸ್ಸಿನೊಂದಿಗೆ ಆಶ್ರಮದ ಪೀಠಾಧಿಪತಿ ಸ್ಥಾನಕ್ಕೇರಿದರು. ೧೯೪೪ರಲ್ಲಿ ವೀರೇಶ್ವರ ಪುಣ್ಯಾಶ್ರಮದ ಭಾರ ಹೊತ್ತ ಪುಟ್ಟರಾಜ ಗವಾಯಿ ಅವರು ತಮ್ಮ ವೈಯಕ್ತಿಕ ಬದುಕನ್ನು ಬದಿಗಿರಿಸಿ ಆಶ್ರಮದ ಅಭಿವೃದ್ಧಿ, ಅಂಧ-ಅನಾಥರ ಕಾಳಜಿಯಲ್ಲಿಯೇ ಶಿವನನ್ನು ಕಂಡರು. ‘ಕಾಯಕವೇ ಕೈಲಾಸವಯ್ಯ’ ಎಂಬ ಶರಣರ ವಾಣಿಯನ್ನು ಅಕ್ಷರಶಃ ಅನುಷ್ಠಾನಗೊಳಿಸಿದರು.

ವೀರೇಶ್ವರ ಪುಣ್ಯಾಶ್ರಮದಲ್ಲಿ ಪುಟ್ಟರಾಜ ಗವಾಯಿಗಳು ಪೂಜಾಕಾರ್ಯ ವಿಭೂತಿ, ಗಂಧ, ಪುಷ್ಪ, ಬಿಲ್ವಪತ್ರಿ,ಬೆಳ್ಳಿಯ ಬೋಗಾಣಿ, ಕರ್ಪೂರ, ರುದ್ರಾಕ್ಷಿ ಮಾಲೆ-ಕಿರೀಟ, ಊದುಬತ್ತಿ, ಪಂಚಾಮೃತ, ಜೋಡು ಗಂಟೆಗಳನ್ನು ಕ್ರಮಬದ್ಧವಾಗಿ ಜೋಡಿಸಿಡಲಾಗುತ್ತಿತ್ತು. ಪದ್ಮಾಸನದಲ್ಲಿನ ಗುರುಗಳ ಮಂತ್ರ ಪಠನ, ಜೋಡುಗಂಟೆಯ ಪೂಜಾಕಾರ್ಯ ನೋಡುವುದೇ ಒಂದು ಭಾಗ್ಯವಾಗಿತ್ತು. ನಿತ್ಯವೂ ಮೂರು ಸಲ ಸುಮಾರು ೪ ರಿಂದ ೫ ತಾಸು ರುದ್ರಾಭಿಷೇಕ, ಜಪದೊಂದಿಗೆ ಪೂಜೆ ಮಾಡುತ್ತಿದ್ದ ಪುಟ್ಟರಾಜ ಗವಾಯಿ ಅನಂತರ ಪ್ರಸಾದ ಸೇವಿಸಿ ಹೊರಬರುತ್ತಿದ್ದರು.

ಪುಟ್ಟರಾಜ ಗವಾಯಿಗಳ ಕೊಡುಗೆ

ನೂರಾರು ಅಂಧ ಅನಾಥ ವಿಕಲಚೇತನ ಮಕ್ಕಳಿಗೆ ಪುಟ್ಟರಾಜ ಗವಾಯಿಗಳು ಸಂಗೀತಾಭ್ಯಾಸ ನೀಡುತ್ತಿದ್ದರು. ಅಂಧತ್ವದ ಶಾಪವನ್ನು ಗ್ರಹಿಸಿದ್ದ ಗವಾಯಿಗಳು ಅವರಿಗೆ ಸ್ವತಂತ್ರವಾಗಿ ಬದುಕುಸಾಗಿಸಲು ಆತ್ಮ ವಿಶ್ವಾಸ ತುಂಬುವುದಲ್ಲದೆ ಜೀವನೋಪಾಯಕ್ಕಾಗಿ ಸಂಗೀತ ಹಾಗೂ ಪ್ರವಚನ, ಪುರಾಣ ಕಲೆಯನ್ನು ಕಲಿಸುತ್ತಿದ್ದರು. ಆಳವಾಗಿ ಅಧ್ಯಯನ ಮಾಡಿ ಸಾಧನೆಗೈದವರು ಶ್ರೇಷ್ಠ ಗಾಯಕರಾಗಿ ಹೊರಹೊಮ್ಮಿದ್ದಾರೆ, ಸಾಧಾರಣ ಪ್ರತಿಭೆ ಹೊಂದಿದವರು ಹೇಗೋ ಜೀವನ ನಡೆಸಲು ಗುರುಗಳು ಕೃಪೆ ತೋರಿದರು. ಆದರೆ ಪುಟ್ಟರಾಜರಿಗೆ ವೈಯುಕ್ತಿಕ ಕೀರ್ತಿ ಹಾಗೂ ಹಣ ಬೇಕಾಗಿರಲಿಲ್ಲ ತಮ್ಮಂತೆ ಅಸಹಾಯಕ ಸ್ಥಿತಿಯಲ್ಲಿರುವ ಲಕ್ಷಾಂತರ ವಿಕಲಚೇತನರಿಗೆ ತಾವು ಸಂಪಾದಿಸಿದ ವಿದ್ಯೆಯನ್ನು ಧಾರೆ ಎರೆಯಲಾರಂಬಿಸಿದರು. ಇಷ್ಟನ್ನೇ ಸಾಧಿಸಿದ್ದರೆ ಗವಾಯಿಗಳು ಒಬ್ಬ ಶ್ರೇಷ್ಠ ಸಂಗೀತ ಗುರುಗಳಾಗುತ್ತಿದ್ದರು. ಆದರೆ ಲಿಂಗ ಪೂಜಾ ನಿಷ್ಟೆಯಿಂದ ವಿಶೇಷ ಆಧ್ಯಾತ್ಮಿಕ ಶಕ್ತಿಯನ್ನು ಮೈಗೂಡಿಸಿಕೊಂಡರು. ಲಿಂಗಾಯತ ಧರ್ಮದ ಏಕತೆ ಸಾರುವ, ಕರಸ್ಥಲಕೆ ಬಂದು ಚುಳುಕಾದ ಇಷ್ಟಲಿಂಗದ ಶಕ್ತಿಯನ್ನು ಅರಿತುಕೊಂಡು, ಲಿಂಗಪೂಜೆ ಮಾಡುತ್ತಾ ಕಠಿಣ ವೃತ ನಿಯಮಗಳನ್ನು ಎಂತಹ ಸಂದರ್ಭದಲ್ಲಿಯೂ ಪಾಲಿಸಿಕೊಂಡು ಸ್ವತಃ ದೇವರಾದರು.

ಸಂಗೀತ ಸಾಹಿತ್ಯ ಹಾಗೂ ಆದ್ಯಾತ್ಮದಲ್ಲಿ ಅವರು ತೋರಿದ ಶ್ರದ್ಧೆ ಅನನ್ಯವಾದುದು. ಒಬ್ಬ ವ್ಯಕ್ತಿ ತನ್ನ ಜೀವಿತಾವಧಿಯಲ್ಲಿ ಯಾವುದಾದರು ಒಂದು ಕ್ಷೇತ್ರದಲ್ಲಿ ಯಶ ಸಾಧಿಸಬಹುದು ಎಂಬ ತಾರ್ಕಿಕ ಲೆಕ್ಕಾಚಾರವನ್ನು ಅಲ್ಲಗಳೆದು ಎಲ್ಲ ಕ್ಷೇತ್ರಗಳಲ್ಲಿ ಹಿಡಿತ ಸಾಧಿಸಿದರು. ಸಂಗೀತದ ಎಲ್ಲ ವಾದ್ಯಗಳನ್ನು ಏಕಕಾಲಕ್ಕೆ ನುಡಿಸಿ ಕೇಳುಗರನ್ನು ಬೆರಗುಗೊಳಿಸುತ್ತಿದ್ದರು. ನವ ರಸಗಳನ್ನು ಮೇಳೈಸಿ ಪ್ರವಚನ ನೀಡುತ್ತಾ ಸಂಗೀತ ವಾದ್ಯಗಳನ್ನು ಪ್ರಸಂಗಕ್ಕೆ ತಕ್ಕಂತೆ ಬಳಸಿ ಪ್ರವಚನದ ಮೆರುಗನ್ನು ಹೆಚ್ಚಿಸುತ್ತಿದ್ದರು. ಹಿಂದೂಸ್ತಾನಿ ಹಾಗೂ ಕರ್ನಾಟಕ ಸಮಗೀತದಲ್ಲಿ ಪ್ರಭುತ್ವ ಸಾಧಿಸಿದ ಏಕಮೇವ ದಿಗ್ಗಜರೆನಿಸಿಕೊಂಡರು. ತಮ್ಮ ಗುರು ಪಂಚಾಕ್ಷರಿ ಗವಾಯಿಗಳ ನಿಧನದ ನಂತರ “ಶ್ರೀ ವೀರೇಶ್ವರ ಪುಣ್ಯಾಶ್ರಮ”ವನ್ನು ಮುನ್ನಡೆಯಿಸಿಕೊಂಡು ಹೋದವರು ಪುಟ್ಟರಾಜ ಗವಾಯಿಗಳು. ಸಂಗೀತ ಸಾಧನೆಯಲ್ಲದೆ, ಪುಟ್ಟರಾಜರು ಪುರಾಣರಚನೆ ಹಾಗು ಸುಮಾರು ೩೫ ನಾಟಕಗಳನ್ನೂ ರಚಿಸಿದ್ದಾರೆ.

ಸಂದ ಪ್ರಶಸ್ತಿ, ಪುರಸ್ಕಾರಗಳು

  • ೧೯೭೦ರಲ್ಲಿ ರಾಜ್ಯೋತ್ಸವ ಪ್ರಶಸ್ತಿ- 1970
  • ೧೯೭೫ರಲ್ಲಿಕರ್ನಾಟಕ ವಿವಿ ಗೌರವ ಡಾಕ್ಟರೇಟ್
  • ೧೯೯೮ರಲ್ಲಿರಾಜ್ಯ ಸರ್ಕಾರದ ಕನಕ ಪುರಂದರ ಪ್ರಶಸ್ತಿ
  • ೧೯೯೮ರಲ್ಲಿಕನ್ನಡ ವಿವಿಯಿಂದ ‘ನಾಡೋಜ’
  • ೧೯೯೯ರಲ್ಲಿಕೇಂದ್ರ ಸಾಹಿತ್ಯ ನಾಟಕ ಅಕಾಡೆಮಿ ಪ್ರಶಸ್ತಿ
  • ೨೦೦೨ರಲ್ಲಿ‘ಬಸವಶ್ರೀ’ ಪ್ರಶಸ್ತಿ
  • ೨೦೦೦ರಲ್ಲಿಕೇಂದ್ರ ಸಾಮಾಜಿಕ ನ್ಯಾಯ ಮತ್ತು ಕಲ್ಯಾಣ ಇಲಾಖೆ ಪ್ರಶಸ್ತಿ
  • ೧೯೯೩ರಲ್ಲಿದಸರಾ ಸಂಗೀತ ವಿದ್ವಾನ್ ಪ್ರಶಸ್ತಿ
  • ೧೯೯೧ರಲ್ಲಿಶಿಕ್ಷಣ ಇಲಾಖೆಯ ಪ್ರಶಸ್ತಿ
  • ೧೯೬೧ರಲ್ಲಿ ಹಿಂದಿಯಲ್ಲಿ ‘ಬಸವಪುರಾಣ’ ರಚಿಸಿದ ಪುಟ್ಟರಾಜರಿಗೆ ರಾಷ್ಟ್ರಪತಿ ಡಾ. ಬಾಬು ರಾಜೇಂದ್ರ ಪ್ರಸಾದ್ ಅವರಿಂದ ಸತ್ಕಾರ
  • ಮಧ್ಯಪ್ರದೇಶ ಸರ್ಕಾರದ ಅತ್ಯುನ್ನತ ಪ್ರಶಸ್ತಿಯಾದ ಕಾಳಿದಾಸ್ ಸಮ್ಮಾನ್

No comments:

Post a Comment

ಡಾ. ಪುಟ್ಟರಾಜ ಗವಾಯಿಗಳ ಜೀವನ ಚರಿತ್ರೆ

  ಪುಟ್ಟರಾಜ ಗವಾಯಿಗಳ ಜೀವನ ಚರಿತ್ರೆ ಪುಟ್ಟರಾಜ ಗವಾಯಿಗಳು ಅವಿಭಜಿತ ಧಾರವಾಡ ಜಿಲ್ಲೆಯ (ಈಗ ಹಾವೇರಿ ಜಿಲ್ಲೆಯ) ಹಾವೇರಿ ತಾಲ್ಲೂಕಿನ ದೇವಗಿರಿಯಲ್ಲಿ ಬಡ ಕನ್ನಡ ಲಿಂಗಾಯತ ...